ಅಯೋಧ್ಯೆಯಲ್ಲಿ ರಾಮಲಲ್ಲಾ ವಿರಾಜಮಾನರಾಗಿ ಈಗಾಗಲೇ ಹಲವು ತಿಂಗಳು ಕಳೆದಿವೆ. ಇದೀಗ ಪ್ರತಿಷ್ಠಾಪನೆಯ ನಂತರ ಮೊದಲ ಬಾರಿಗೆ ಅದ್ದೂರಿ ದೀಪೋತ್ಸವವನ್ನು ಮುಂದಿನ ತಿಂಗಳು ಅಂದರೆ ಅಕ್ಟೊಬರ್ ೨೮ ರಿಂದ ಆರಂಭವಾಗಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿರುವುದಾಗಿ ವರದಿಯಾಗಿದೆ.

ಈ ಸಂದರ್ಭದಲ್ಲಿ ಅಯೋಧ್ಯೆಯಾದ್ಯಂತ ಸುಮಾರು ೨೫ ಲಕ್ಷಕ್ಕೂ ಅಧಿಕ ದೀಪಗಳನ್ನು ಬೆಳಗಳಾಗುವುದೆಂದು ತಿಳಿಸಲಾಗಿದೆ. ಈ ದೀಪೋತ್ಸವವು ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿರುವುದಾಗಿ ವರದಿಯಾಗಿದೆ.
ಕೇವಲ ದೀಪೋತ್ಸವ ಕಾರ್ಯಕ್ರಮವಲ್ಲದೆ ಪರಿಸರ ಸ್ನೇಹಿಯಾದಂತಹ ಲೇಸರ್ ಪ್ರದರ್ಶನ ಹಾಗೂ ಸಿಡಿಮದ್ದು ಪ್ರದರ್ಶನಗಳನ್ನು ಸಹ ಆಯೋಜಿಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮವು ಇದೆ ವರ್ಷದ ಜನವರಿ ೨೨ ರಂದು ಅದ್ದೂರಿಯಾಗಿ ಜರುಗಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದರು. ಅಲ್ಲದೆ ದೇಶಾದ್ಯಂತ ಲಕ್ಷಅಂತರ ಜನರು ಈ ಸಂದರ್ಭದಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದರು.
ಇದೀಗ ಪ್ರಾಣಪ್ರತಿಷ್ಠೆಯ ನಂತರ ಮೊದಲ ಬಾರಿ ಲಕ್ಷ ದೀಪೋತ್ಸವ ಅಯೋಧ್ಯಾ ಧಾಮದಲ್ಲಿ ಜರುಗಲಿದ್ದು, ಅಕ್ಟೊಬರ್ ೨೮ ರಿಂದ ೩೧ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ರಾಮ್ ಕಿ ಪೈದಿ, ನಯಾ ಘಾಟ್ ಸೇರಿದಂತೆ ಅಯೋಧ್ಯೆಯ ಎಲ್ಲ ದೇವಸ್ಥಾನ ಹಾಗೂ ಪ್ರಮುಖ ಪ್ರದೇಶಗಳಲ್ಲಿ ಸುಮಾರು ೨೫ ಲಕ್ಷಕ್ಕೂ ಅಧಿಕ ದೀಪಗಳು ಬೆಳಗಲಿವೆ ಎಂದು ಸರ್ಕಾರ ತಿಳಿಸಿರುವುದಾಗಿ ವರದಿಯಾಗಿದೆ.
ದೇಶದಲ್ಲಿ ಅತಿ ಸಡಗರ ಸಂಭ್ರಮದಿಂದ ಆಚರಿಸಲಾಗುವ ದೀಪಾವಳಿ ಹಬ್ಬವೂ ಈ ಸಂದರ್ಭದಲ್ಲಿರುವುದರಿಂದ ಈ ದೀಪೋತ್ಸವವನ್ನು ಇನ್ನಷ್ಟು ವರ್ಣರಂಜಿತವನ್ನಾಗಿ ಮಾಡಿ ಆಚರಿಸಲು ಸಕಲ ಸಿದ್ಧತೆಗಳು ಮಾಡಲಾಗುತ್ತಿದೆ.
ಅತ್ಯಾಧುನಿಕ ಲೈಟಿಂಗ್ ಸೆಟಪ್, ವೈವಿಧ್ಯ ಕಲಾತ್ಮಕತೆಯ ಅಳವಡಿಕೆಗಳು ಈ ಬಾರಿ ಅಯೋಧ್ಯೆಯಾದ್ಯಂತ ಮಿಂಚಲಿದ್ದು ಇಲ್ಲಿಗೆ ಹರಿದು ಬರುವ ಭಕ್ತಾದಿಗಳ ತಾನು-ಮನ ತಣಿಸಲಿವೆ.
ಇನ್ನು ಅಯೋಧ್ಯೆಯ ಪ್ರವೇಶದ್ವಾರ ಸೇರಿದಂತೆ ಭಕ್ತಿಪಥವೂ ಮದುವಣಗಿತ್ತಿಯಂತೆ ಪುಷ್ಪ ಹಾಗೂ ದೀಪಗಳಿಂದ ಅಲಂಕೃತಗೊಳ್ಳಲಿವೆ ಎಂಬುದಾಗಿ ತಿಳಿದುಬಂದಿದೆ.
ಒಟ್ಟಿನಲ್ಲಿ ಈ ದೀಪಾವಳಿ ಅಯೋಧ್ಯೆಯಲ್ಲಿ ಮರೆಯಲಾಗದ ಹಾಗೂ ಅದ್ಭುತವಾದ ದೀಪಾವಳಿಯ ಅನುಭವ ನೀಡಲಿದೆ ಎಂಬುದನ್ನು ಆಶಿಸೋಣ.